ಎಟಿಎಂನಲ್ಲಿ ಚಿಲ್ಲರೆ ಹಣ!!!!
ಎಟಿಎಂಗಳಲ್ಲಿ ಯಾವತ್ತೂ ಸಾವಿರ ರೂ., ಐನೂರು ರೂ. ಸಂಬಳ ನಿರೀಕ್ಷಿಸುತ್ತಿದ್ದ ಬೊ.ರ. ಬ್ಯುರೋದ ಮಂದಿಗೆ ಇದು ಅಚ್ಚರಿಯ ವಿಷಯ. ಈ ಮಣಭಾರದ ಹಣ ಹೊತ್ತುಕೊಳ್ಳಲಾಗದೆ ತೊಳಲಾಡುತ್ತಾ, ಈ ಪರಿಸ್ಥಿತಿಯ ಬೆನ್ನ ಹಿಂದೆ ಬಿದ್ದಾಗ ಸತ್ಯಾಂಶ ಕಂತೆ ಕಂತೆಯಾಗಿ ಬಯಲಿಗೆ ಬಂತು.
ಅದೆಂದರೆ, ಸಂಸತ್ತಿನಲ್ಲಿ ಓಟು ಹಾಕುವುದಕ್ಕೆ ನೋಟುಗಳನ್ನೆಲ್ಲಾ ವಿತರಿಸಲಾಗಿದೆ. ಓಟು ಹಾಕಲು ನೋಟು ಕೊಟ್ಟರೂ, ಇಷ್ಟೊಂದು ಪ್ರಮಾಣದಲ್ಲಿ ನೂರು, ಐನೂರು, ಸಾವಿರ ರೂಪಾಯಿ ನೋಟುಗಳು ನಾಪತ್ತೆಯಾಗಿದ್ದೇಕೆ ಎಂಬುದು ಎಷ್ಟೇ ತಲೆ ಕೆರೆದರೂ ಹೊಳೆಯದಾದಾಗ, ತಲೆ ಕೆರೆಯಲು ಕೆರವನ್ನೇ ಹಿಡಿದು ನೋಡಿದಾಗ ತಕ್ಷಣವೇ ವಿಷಯ ಹೊಳೆಯಿತು.
ವಿಷಯ ಏನಂದ್ರೆ, ನಾವೆಲ್ಲಾ ತಿಳಿದುಕೊಂಡದ್ದು ಓಟಿಗಾಗಿ ನೋಟು ನೀಡುವುದು ಮಾತ್ರ. ಆದರೆ ಓಟು ಹಾಕದಂತೆಯೂ, ಮತದಾನಕ್ಕೇ ಬಾರದಂತೆಯೂ ಒತ್ತಾಯಿಸಿ ನೋಟು ಕೊಡುವ ಪ್ರಕರಣದಿಂದಾಗಿಯೇ ಈ ಎಲ್ಲಾ ನೋಟುಗಳು ಎಟಿಎಂನಿಂದ ಖಾಲಿಯಾಗಿವೆ ಎಂಬುದು ಆ ಬಳಿಕ ತಿಳಿಯಿತು.
ಹಾಗಿದ್ದರೆ ಈ ಸಂಸದರೇಕೆ ಹೀಗೆ ಮಾಡಿದರು? ಹಣವೇಕೆ ಪಡೆದರು? ಎಂಬ ಪ್ರಶ್ನೆಯ ಹಿಂದೆ ಹಿಂದೆಯೇ ಹೋದಾಗ ದೊರೆತ ವಿಷಯವೆಂದರೆ, ಜಾಗತಿಕವಾಗಿ ದೇಶದ ಮೌಲ್ಯ ಇಳಿಕೆಯಾಗಿರುವುದು. ಹಣದುಬ್ಬರ, ಬೆಲೆಗಳು ಎಲ್ಲಾ ಏರುತ್ತಿರುವಾಗ ಭ್ರಷ್ಟಾಚಾರದಲ್ಲಿಯೂ ಭಾರತದ ಸ್ಥಾನ ಏರಬೇಡವೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ, ಸಂಸದರು ಈ ಸ್ಟಿಂಗ್ ಕಾರ್ಯಾಚರಣೆಗಿಳಿದು ಕೋಟಿ ಕೋಟಿ ಹಣ ಸ್ವೀಕರಿಸಿದರು ಎಂದು ತಿಳಿದುಬಂದಿದೆ.
ಮತ್ತೆ ಕೆಲವರ ಪ್ರಕಾರ, ಸಂಸದರಿಗೆ ನೀಡಿದ ಹಣ ಇಷ್ಟೆಯಾ? ಕೇವಲ ಒಂದು ಕೋಟಿ ನೀಡಿ ನಮ್ಮ ಮಹಾನ್ ದೇಶದ ಸಂಸದರು ಇಷ್ಟು ಕಳಪೆ ಮೌಲ್ಯದವರು ಎಂದು ಬಿಂಬಿಸಲು ಯತ್ನಿಸಿದವರ ವಿರುದ್ಧ ಆಕ್ರೋಶಗೊಂಡು ಈ ಹಣವನ್ನು ಅಲ್ಲಿ ತಂದು ಸುರಿದರು ಎಂದು ಕೂಡ ನಂಬಲನರ್ಹ ಮೂಲಗಳು ವ-ರದ್ದಿ ತಂದು ಸುರಿದಿವೆ.
ವಿಶ್ವಾಸ ಮತ ಆರಂಭವಾಗುವ ಮೊದಲೇ ನಮ್ಮ ಬೆಲೆ ಏನಿಲ್ಲವೆಂದರೂ 25ರಿಂದ 100 ಕೋಟಿ ಇದೆ ಅಂತ ಹಿರಿಯ ಸಂಸದರೇ ಹೇಳಿಕೆ ನೀಡಿದ್ದರು. ಈಗ ನೋಡಿದರೆ ಕೊಟ್ಟದ್ದು ಕೇವಲ 1 ಕೋಟಿ. ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ, ನಾವು ಇಂಥ ಹಣ ಮುಟ್ಟುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ನಮ್ಮದಲ್ಲದ ಮೂಲಗಳು ಹೇಳಿವೆ.
ಇನ್ನೂ ಒಂದು ನಂಬಲನರ್ಹ ಮೂಲದ ಪ್ರಕಾರ, ಸಂಸದರಲ್ಲಿ ಬಡತನ ಕಾಡುತ್ತಿದ್ದು, ಅವರಿಗೆ ಈಗ ಬೇಕಾಗಿರುವುದು ಹಣ ಮತ್ತು ಸಾಕಷ್ಟು 'ಮೌಲ್ಯ'ಆಧಾರಿತ ರಾಜಕೀಯ. ಈ ಕಾರಣಕ್ಕಾಗಿಯೇ ಸಂಸತ್ತಿನೊಳಗೆ ಹಣ ಹಂಚಲು ತರಲಾಗಿದೆ. ಇನ್ನು ಮುಂದೆ ಬಾಕಿ ಉಳಿದಿರುವ ಮದಿರೆ-ಮಾನಿನಿಯರ ಪೂರೈಕೆಯೂ ನಡೆಯಲಿದೆ ಎಂದು ಯಾರೂ ನಮಗೆ ವರದಿ ಮಾಡದೆಯೇ ಪ್ರಕಟಿಸಿದ್ದೇವೆ. ಅಧಿಕಾರ ಉಳಿಸಿಕೊಳ್ಳಲು ಈ ಸಂಸದರ ಬೆಲೆ ಇಷ್ಟೊಂದು ತುಟ್ಟಿಯೇ ಎಂದು ಸ್ವತಃ ಸರಕಾರವೇ ಬೆಲೆ ಏರಿಕೆಯಿಂದ ಕಂಗೆಟ್ಟುಹೋಗಿದ್ದು ಯಾರಿಗೂ ತಿಳಿಯದ ಸಂಗತಿಯಾಗಿದೆ.